Tuesday, September 14, 2010

Prajavani Spet 14 Editorial

‘ಅಕ್ಕ’ನ ಅಂಗಳದಲ್ಲಿ ಮಾಸುತಿದೆ ಕನ್ನಡದ ಕಂಪು

http://www.prajavani.net/Content/Sep142010/editpage20100913203949.asp

ಆರ್. ಇಂದಿರಾ
ಕನ್ನಡ ಭಾಷೆಯಲ್ಲಿ ‘ಅಕ್ಕ’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ. ಪ್ರೀತಿ, ಗೌರವ, ಐಕ್ಯತೆ, ಸದ್ಭಾವನೆ ಹಾಗೂ ಸತ್‌ಸಂಬಂಧಗಳ ಸಂಕೇತವಾದ ಈ ಪದವನ್ನು ಕೇಳಿದಾಗಲೇ ಮನಸ್ಸಿಗೆ ಮುದ ನೀಡುವಂಥ ಅನುಭವವಾಗುತ್ತದೆ ಎನ್ನುವುದು ನಮ್ಮ ಭಾವನೆ.


ಉತ್ತರ ಅಮೆರಿಕದ ನಾನಾ ಭಾಗಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಸಂಘಗಳನ್ನೆಲ್ಲಾ ‘ಅಕ್ಕ’ (ಅಸೋಸಿಯೇಷನ್ ಆಫ್ ಕನ್ನಡ ಕೂಟಾಸ್ ಆಫ್ ಅಮೆರಿಕ) ಎಂಬ ಒಂದೇ ಒಕ್ಕೂಟದಡಿಯಲ್ಲಿ ತಂದು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ನಾವೆಲ್ಲಾ ಒಟ್ಟಾಗಿ ದುಡಿಯುತ್ತೇವೆ ಎಂದು ಅಲ್ಲಿನ ನಮ್ಮ ಕನ್ನಡ ಬಂಧುಗಳು ಘೋಷಿಸಿದಾಗಲೂ ಇಂತಹುದೇ ಹಿತವಾದ ಅನುಭವ ನಮಗೆ ಆಗಿತ್ತು.

1998ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ಅಕ್ಕನಿಗೆ ಎಷ್ಟು ಗೋಚರತೆ ಹಾಗೂ ಪ್ರಚಾರ ದೊರೆಯಿತೆಂದರೆ ಸ್ವತಃ ಕರ್ನಾಟಕ ಸರ್ಕಾರವೇ ಅದಕ್ಕೆ ಮಾನ್ಯತೆ ನೀಡಿತಷ್ಟೇ ಅಲ್ಲ, 2001ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ದಯಪಾಲಿಸಿತು. ಎರಡು ವರ್ಷಗಳಿಗೊಮ್ಮೆ ಅಮೆರಿಕದ ಆಯ್ದ ನಗರವೊಂದರಲ್ಲಿ ನಡೆಯುವ ‘ಅಕ್ಕ’ ಪ್ರಾಯೋಜಿತ ವಿಶ್ವ ಕನ್ನಡ ಸಮ್ಮೆಳನದಲ್ಲಿ ಭಾಗವಹಿಸುವುದು ಪ್ರತಿಷ್ಠೆಯ ಸಂಕೇತ ಎಂದು ಪರಿಗಣಿಸುವಂಥ ಪರಿಸ್ಥಿತಿಯೂ ಸೃಷ್ಟಿಯಾಯಿತು. ಸಮ್ಮೇಳನದಿಂದ ಸಮ್ಮೇಳನಕ್ಕೆ ಪ್ರತಿನಿಧಿಗಳ ಸಂಖ್ಯೆಯೂ ಹೆಚ್ಚಾಯಿತಷ್ಟೇ ಅಲ್ಲ, ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ ಅಮೆರಿಕಕ್ಕೆ ತೆರಳುವ ನಿಯೋಗದ ಸದಸ್ಯತ್ವ ಪಡೆಯ ಬಯಸುವ ಆಕಾಂಕ್ಷಿಗಳ ಸಾಲೂ ಬೆಳೆಯತೊಡಗಿತು.

ಕನ್ನಡ ಭಾಷೆ, ಸಾಹಿತ್ಯ ಹಾಗೂ ನಮ್ಮ ಸಂಸ್ಕೃತಿಯ ಸಂಕೇತಗಳಾದ ಕಲಾ ಪ್ರಕಾರಗಳ ಅಭಿವೃದ್ಧಿಗಾಗಿ ಬಹುಕಾಲದಿಂದ ದುಡಿದಂಥವರು ನಿಯೋಗಗಳ ಸದಸ್ಯರಾದಾಗ ಅಥವಾ ‘ಅಕ್ಕ’ ವಿಶ್ವ ಸಮ್ಮೇಳನಗಳ ಆಯೋಜಕರಿಂದಲೇ ಆಹ್ವಾನಿತರಾಗಿ ಅಮೆರಿಕಾಗೆ ತೆರಳಿದಾಗ ಆ ಸ್ಥಾನ ಹಾಗೂ ಅವರು ಪ್ರತಿನಿಧಿಸುವ ಕನ್ನಡ ಸಂಸ್ಕೃತಿ-ಇವೆರಡಕ್ಕೂ ಗೌರವ ಸಂದಿತ್ತು, ಈಗಲೂ ಸಲ್ಲುತ್ತದೆ. ಆದರೆ ಬರಬರುತ್ತಾ ಸರ್ಕಾರಿ ನಿಯೋಗದ ಸದಸ್ಯತ್ವದ ಸ್ವರೂಪ ಬದಲಾಗುತ್ತಾ ಹೋಗಿ ‘ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಇವರ ಕೊಡುಗೆಯಾದರೂ ಏನು’ ಎಂಬ ಪ್ರಶ್ನೆಯನ್ನು ನಾವು ಯಾರನ್ನು ಕುರಿತು ಎತ್ತಲೇ ಬೇಕಾದಂಥ ಸ್ಥಿತಿ ಇತ್ತೋ, ಅಂಥಾ ಅನೇಕರು ಈ ನಿಯೋಗಗಳಲ್ಲಿ ಸ್ಥಾನ ಗಳಿಸಲಾರಂಭಿಸಿದ್ದು ಕನ್ನಡದ ಬಗ್ಗೆ ನೈಜ ಕಾಳಜಿ ಹೊಂದಿರುವವರಲ್ಲಿ ಸಹಜವಾಗಿಯೇ ತೀವ್ರ ಸ್ವರೂಪದ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು.

ವಿಶ್ವ ಕನ್ನಡ ಸಮ್ಮೇಳನಗಳಿಗೆ ಕರ್ನಾಟಕದ ಪ್ರತಿನಿಧಿಗಳಾಗಿ ತೆರಳುವ ನಿಯೋಗಗಳ ಸದಸ್ಯರ ಆಯ್ಕೆಗೆ ಬಳಸುವ ಮಾನದಂಡಗಳಾವುವು ಎಂಬುದು ತೀರಾ ಮೂಲಭೂತವಾದಂಥ ಒಂದು ಪ್ರಶ್ನೆ. ಈ ತಂಡಗಳಲ್ಲಿ ಇತ್ತೀಚೆಗೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವಂಥವರು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ವಾಣಿಜ್ಯೋದ್ಯಮಿಗಳು. ಈ ಗುಂಪಿನವರು ಕನ್ನಡ ನಾಡನ್ನು ಪ್ರತಿನಿಧಿಸಬಾರದು ಎಂದಲ್ಲ, ಆದರೆ ರಾಜ್ಯದ ಅಭಿವೃದ್ಧಿಗೆ ಇವರು ನೀಡಿರುವ ಕೊಡುಗೆಗಳಾದರೂ ಏನು ಎಂಬ ಪ್ರಶ್ನೆಯನ್ನೆತ್ತಿದಾಗ ಇವರಲ್ಲಿ ಅನೇಕರಿಗೆ ಕನ್ನಡ ಪರವಾದಂಥ ವಿಶೇಷ ಕಾಳಜಿಗಳಿಲ್ಲದಿರುವುದು ನೇರವಾಗಿಯೇ ಗೋಚರವಾಗುತ್ತದೆ. ಕೆಲವೊಮ್ಮೆಯಂತೂ ಸಾರ್ವಜನಿಕ ಬದುಕಿನ ಗುಣಮಟ್ಟವನ್ನು ಇಳಿಸಿದ ಕುಖ್ಯಾತಿಯನ್ನು ಪಡೆದಂಥ ವ್ಯಕ್ತಿಗಳೂ ಸರ್ಕಾರಿ ನಿಯೋಗಗಳಲ್ಲಿ ಸ್ಥಾನವನ್ನು ಪಡೆದಿರುವುದನ್ನು ನೋಡಿದರೆ ಆಯ್ಕೆಯ ಪ್ರಕ್ರಿಯೆಯ ಬಗ್ಗೆಯೇ ತೀವ್ರವಾದ ಅನುಮಾನಗಳು ಉಂಟಾಗುತ್ತವೆ.

ಕೇವಲ ಸರ್ಕಾರಿ ನಿಯೋಗಗಳಲ್ಲಷ್ಟೇ ಅಲ್ಲ, ಸಮ್ಮೇಳನಗಳ ಆಯೋಜಕರಿಂದ ನೇರವಾಗಿ ಆಹ್ವಾನಿತರಾದವರ ಪಟ್ಟಿಗಳಲ್ಲಿ ಕೆಲವು ಹೆಸರುಗಳನ್ನು ನೋಡಿದಾಗಲೂ ‘ಪ್ರತಿಭೆ’, ‘ಪರಿಶ್ರಮ’ಗಳಿಗಿಂತ ಬೇರೆ ಅಂಶಗಳಿಗೇ ಪ್ರಾಶಸ್ತ್ಯ ನೀಡಿರುವುದು ಸ್ಪಷ್ಟವಾಗುತ್ತದೆ. ‘ಅಕ್ಕ’ ಇರಬಹುದು ಅಥವಾ ಈ ಒಕ್ಕೂಟದಿಂದ ಹೊರಬಂದ ಏಳು ಸ್ಥಾಪಕ ಸದಸ್ಯರು ಇತರ ಇಪ್ಪತ್ತೈದು ಮಂದಿ ಕನ್ನಡಿಗರೊಡಗೂಡಿ ಕಳೆದ ವರ್ಷವಷ್ಟೇ ಹುಟ್ಟು ಹಾಕಿದ ಪರ್ಯಾಯ ಒಕ್ಕೂಟ ‘ನಾವಿಕ’ (ನಾರ್ತ್ ಅಮೆರಿಕಾ ವಿಶ್ವ ಕನ್ನಡ ಅಸೋಸಿಯೇಷನ್) ಇರಬಹುದು, ಇವರು ನಡೆಸುವ ಸಮ್ಮೇಳನಗಳ ಆಹ್ವಾನಿತರ ಪಟ್ಟಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಲ್ಲೋ ಒಂದೆಡೆ ಸಂಘಟಕರ ವೈಯಕ್ತಿಕ ಖಾಯಿಶ್‌ಗಳು ಅಥವಾ ಪೂರ್ವಗ್ರಹಗಳು ಹತ್ತು-ಹಲವಾರು ಆಹ್ವಾನಿತರ ಆಯ್ಕೆಯನ್ನು ಪ್ರಭಾವಿಸಿರುವುದು ಎದ್ದು ಕಾಣುತ್ತದೆ.

ಪ್ರಭಾವ, ಪರಿಚಯ, ಅಧಿಕಾರ, ಕೌಟುಂಬಿಕ ಸಂಬಂಧಗಳು ಇವೇ ಮುಂತಾದ ಕಾರಣಗಳಿಗಾಗಿ ವ್ಯಕ್ತಿಗಳನ್ನು ಗುರುತಿಸುವಂಥ ಪ್ರವೃತ್ತಿಗಳು ಕೇವಲ ಭಾರತೀಯ ನೆಲದಲ್ಲಿ ಕಾಣಸಿಗುವಂಥವು ಎಂದು ವಾದ ಮಾಡುವವರಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯಗಳ ಸಂಬಂಧ ಜಾಲ ಗಳನ್ನು (ನೆಟ್‌ವರ್ಕ್) ಆಳವಾಗಿ ಅಧ್ಯಯನ ಮಾಡಿದಾಗ ತಿಳಿಯುತ್ತದೆ, ಈ ಪ್ರವೃತ್ತಿಗಳು ಸಾಗರದಾಚೆಯೂ ಬಹು ಜೀವಂತವಾಗಿವೆ ಎಂಬ ಕಟು ಸತ್ಯ. ಕನ್ನಡ ಸಂಸ್ಕೃತಿಯ ಏಳಿಗೆ-ರಕ್ಷಣೆಗಳಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿರುವ ಅನೇಕರು ಸರ್ಕಾರದ ಅಥವಾ ಸಂಘಟಕರ ಪಕ್ಷಪಾತ ಧೋರಣೆಗಳಿಂದ ಬೇಸತ್ತು ವಿಶ್ವ ಸಮ್ಮೇಳನಗಳಿಂದ ದೂರ ಉಳಿದಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ.

ಒಂದೆಡೆ ಆಯ್ಕೆಯ ಪ್ರಕ್ರಿಯೆಯ ಬಗ್ಗೆ ಅಪಸ್ವರಗಳು ಏಳುತ್ತಿದ್ದರೆ ಮತ್ತೊಂದೆಡೆ ಇತ್ತೀಚೆಗೆ ಅಮೆರಿಕದ ನ್ಯೂಜರ್ಸಿಯಲ್ಲಿ ನಡೆದ ಆರನೇ ವಿಶ್ವ ಕನ್ನಡ ಸಮ್ಮೇಳನವನ್ನು ಪ್ರಾಯೋಜಿಸಿದ ‘ಅಕ್ಕ’ ಆಯೋಜಕರು ಕರ್ನಾಟಕದಿಂದ ತೆರಳಿದ ನಿಯೋಗವನ್ನು ನಡೆಸಿಕೊಂಡ ರೀತಿ ತೀವ್ರ ಸ್ವರೂಪದ ಆಕ್ರೋಶ-ಅಸಂತುಷ್ಟಿಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನವನ್ನು ಪಡೆದ ಈ ಸಮ್ಮೇಳನದ ಆಯೋಜಕರು ಅದೇ ಸರ್ಕಾರವನ್ನು ಪ್ರತಿನಿಧಿಸುವ ನಿಯೋಗದ ಸದಸ್ಯರಿಗೆ ಸೂಕ್ತವಾದ ವೇದಿಕೆಯನ್ನು ನೀಡುವುದಿರಲಿ, ತೀರಾ ಮೂಲಭೂತ ಅವಶ್ಯಕತೆಗಳಾದ ವಸತಿ, ಆಹಾರ, ವಾಹನ ಮುಂತಾದ ಸೌಕರ್ಯಗಳನ್ನೂ ಒದಗಿಸಲಿಲ್ಲವೆಂಬುದು ಪತ್ರಿಕಾ ವರದಿಗಳಿಂದ ಸ್ಪಷ್ಟವಾಗಿದೆ. ಎಂಥಾ ವಿಪರ್ಯಾಸವಿದು?

ನಾಡಿನ ಹಿರಿಯ ಸಾಹಿತಿಗಳು ಹಾಗೂ ಕಲಾವಿದರನ್ನು ಕರೆದು ಅವರಿಗೆ ಅಗೌರವ ಸೂಚಿಸಿದಂಥ ಪ್ರಕರಣಗಳು ಈ ಹಿಂದೆಯೂ ನಡೆದಿವೆ; ಇಂದಿಗೂ ನಡೆಯುತ್ತಿವೆ. ಇದುವರೆಗೂ ನಡೆದು ಹೋದ ಸಮ್ಮೇಳನಗಳಲ್ಲಿ ಕೆಲವು ಕಲಾವಿದರ - ಸಾಹಿತಿಗಳ ಕಾರ್ಯಕ್ರಮಗಳನ್ನು ಬೆರಳೆಣಿಸುವಷ್ಟು ಸಂಖ್ಯೆಯ ಸಭಿಕರು ಮಾತ್ರವಿರುವ ಸಣ್ಣ - ಸಣ್ಣ ಕೊಠಡಿಗಳಲ್ಲಿ ಏರ್ಪಡಿಸಿ, ಮುಖ್ಯ ವೇದಿಕೆಯಲ್ಲಿ ಸಂಘಟಕರ ಕುಟುಂಬಗಳವರು ಭಾಗವಹಿಸಿದ ಫ್ಯಾಷನ್ ಷೋಗಳು, ಸಿನಿ ಮಾದರಿಯ ಸಮೂಹ ನೃತ್ಯಗಳು ಅಥವಾ ಆಯ್ದ ಚಲನ ಚಿತ್ರಕಲಾವಿದರಿಂದ ಮಾತ್ರ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ತಮ್ಮನ್ನು ಅವಮಾನಕರವಾದ ರೀತಿಯಲ್ಲಿ ನಡೆಸಿಕೊಂಡದ್ದು -ಇವುಗಳ ಬಗ್ಗೆ ಹತ್ತಾರು ಕಲಾವಿದರು ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ಈ ಇಡೀ ಪ್ರಕರಣದ ದುರಂತವೆಂದರೆ ಇಂಥ ಘಟನೆಗಳಿಂದ ನಾವು ಪಾಠ ಕಲಿಯಲಿಲ್ಲವೆನ್ನುವುದು.

ಕಳೆದ ವರ್ಷ ‘ಅಕ್ಕ’ದಿಂದ ದೂರ ಸಿಡಿದು ಹೋದ ಗುಂಪೊಂದು ‘ನಾವಿಕ’ ಎನ್ನುವ ಹೊಸ ಸಂಘಟನೆಯೊಂದನ್ನು ಪ್ರಾರಂಭಿಸುವಾಗ ‘ಅಕ್ಕ’ನ ಆಂತರಿಕ ವ್ಯವಹಾರಗಳನ್ನು ಕುರಿತಂತೆ ಕೆಲ ವಿಚಾರಗಳನ್ನು ಬಹಿರಂಗವಾಗಿಯೇ ಚರ್ಚಿಸಿದ್ದು, ಇವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಆಡಳಿತಯಂತ್ರಕ್ಕೆ ಸಾಕಷ್ಟು ಕಾಲಾವಕಾಶವಿದ್ದಾಗ್ಯೂ ಹಾಗೆ ಮಾಡಲಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತದೆ. ಜುಲೈ ತಿಂಗಳಿನಲ್ಲಿ ಇದೇ ‘ನಾವಿಕ’ ಕ್ಯಾಲಿಫೋರ್ನಿಯಾದಲ್ಲಿ ನಡೆಸಿದ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿದ ಕೆಲ ಕಲಾವಿದರು - ಸಾಹಿತಿಗಳಿಂದ ಅವರಿಗಾದ ಅನುಭವಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರೆ ಅಮೆರಿಕನ್ನಡಿಗರ ಕನ್ನಡಾಭಿಮಾನ ಹೇಗೆ ಹೊರಹೊಮ್ಮುತ್ತದೆ ಎಂಬುದರ ಬಗ್ಗೆ ಸ್ವಲ್ಪವಾದರೂ ಸುಳಿವು ದೊರೆಯು ತ್ತಿದ್ದವೇನೋ?

ಉತ್ತರ ಅಮೆರಿಕದ ಅನೇಕ, ಕನ್ನಡ ಸಂಘಗಳಲ್ಲಿ ‘ಸ್ವಪ್ರೇಮ’, ‘ಸ್ವಗುಂಪು ಪ್ರೇಮ, ಹಾಗೂ ‘ಸ್ವಕುಟುಂಬ ಪ್ರೇಮ’ ತುಂಬಿ ತುಳುಕುತ್ತಿರುವುದು ಯಾರಿಗೂ ಅರಿಯದ ವಿಷಯವಲ್ಲ. ಸಹಜವಾಗಿಯೇ ಈ ಸಂಘಗಳನ್ನು ಸ್ಥಾಪಿಸಿ ಅವುಗಳನ್ನು ಬೆಳೆಸಿದ ಅನೇಕ ಹಿರಿಯರಲ್ಲಿ ನೋವು ಹಾಗೂ ಅಸಮಾಧಾನಗಳೆರಡೂ ಕಾಲ ಕ್ರಮೇಣ ಹೆಚ್ಚುತ್ತಾ ಹೋದವು. ಅರವತ್ತರ ದಶಕಗಳಲ್ಲಿ ಅಮೆರಿಕ ಹಾಗೂ ಕೆನಡಾ ದೇಶಗಳಿಗೆ ಕನ್ನಡ ನಾಡಿನಿಂದ ವಲಸೆ ಹೋದ ಕೆಲವರು ತಾವು ನೆಲೆಸಿದ ನಗರಗಳಲ್ಲಿ ಕನ್ನಡಿಗರನ್ನು ಕಲೆ ಹಾಕಿ ಕನ್ನಡ ಸಂಘಗಳನ್ನು ಸ್ಥಾಪಿಸಿದರು.

ಆಗಿನ ಕಾಲ ಘಟ್ಟದಲ್ಲಿ ಚುನಾವಣೆಗಳು, ಪದಾಧಿಕಾರಿಗಳ ಆಯ್ಕೆಗಳು, ಅಧಿಕಾರ ಸ್ಥಾನಗಳಿಗಿಂತ ಕನ್ನಡ ಜನ-ಮನಗಳನ್ನು ಒಟ್ಟಿಗೆ ಸೇರಿಸುವುದಕ್ಕೆ ಪ್ರಾಶಸ್ತ್ಯವನ್ನು ನೀಡಲಾಗಿದ್ದುದರಿಂದ ಸಂಘಗಳು ವಿಶೇಷವಾಗಿ ಒಂದು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕಾಲಕ್ರಮೇಣ ಸಂಘಗಳ ಸಂಖ್ಯೆಯೂ ಬೆಳೆದು ಕನ್ನಡಿಗರ ಸಂಖ್ಯೆಯೂ ಹೆಚ್ಚಾದುದರಿಂದ ಅನೇಕ ಸಂಘಗಳಲ್ಲಿ ನಾಯಕತ್ವದ ಸ್ಥಾನಗಳನ್ನು ಪಡೆಯಲು ಗೋಚರತೆಯನ್ನು ಗಳಿಸಲು ಕರ್ನಾಟಕದಲ್ಲಿ ಹಾಗೂ ಅಧಿಕಾರ ಕೇಂದ್ರಗಳೊಡನೆ ಗುರುತಿಸಿಕೊಳ್ಳಲು ಪೈಪೋಟಿ ಪ್ರಾರಂಭವಾಗಿ ಸಂಘಗಳ ಮೂಲ ಉದ್ದೇಶಗಳಿಗೇ ಭಂಗ ಬರುವಂಥ ಪರಿಸ್ಥಿತಿ ಸೃಷ್ಟಿಯಾಗಿದ್ದು ಕಳವಳಕಾರಿಯಾದ ಬೆಳವಣಿಗೆ. ಈ ವಿಷಯಗಳೆಲ್ಲ ಸುಮಾರು ಜನಕ್ಕೆ ತಿಳಿದಿದ್ದರೂ ಹಿಂದಿನ ಸಮ್ಮೇಳನಗಳಲ್ಲೂ ಇಂತಹುದೇ ಅವಮಾನಗಳಾಗಿದ್ದರೂ ಸರ್ಕಾರ ಒಂದು ಕೋಟಿ ರೂಪಾಯಿಗಳನ್ನು ರಾಜ್ಯದ ಬೊಕ್ಕಸದಿಂದ ಈ ಸಮಾವೇಶಕ್ಕೆ ರವಾನಿಸಿದ್ದು ವಿಷಾದನೀಯ.

ಈ ಹೊತ್ತು ಉತ್ತರ ಅಮೆರಿಕದಲ್ಲಿ ಸುಮಾರು 60,000 ಕನ್ನಡಿಗರಿದ್ದು, ಅಮೆರಿಕ ದೇಶದಲ್ಲಿಯೇ 33 ಕನ್ನಡ ಸಂಘಗಳಿವೆ. ಇಂಥ ಸಂಘಗಳ ಅನೇಕ ಸದಸ್ಯರು ಕನ್ನಡದ ಮೇಲಿನ ಅಭಿಮಾನಕ್ಕೆ ಈ ಸಂಘಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ, ಮತ್ತನೇಕರು ದೂರವೇ ಉಳಿಯುತ್ತಿದ್ದಾರೆ. ಇಂತಹ ಸಂಘಗಳ ಸದಸ್ಯರಲ್ಲಿಯೇ ಅಸಮಾಧಾನ ಹೊಗೆಯಾಡುತ್ತಿದ್ದು ಸಂಘದ ವೇದಿಕೆಗಳು ಕೆಲವು ಕುಟುಂಬಗಳ ಅಥವಾ ಕೆಲ ವ್ಯಕ್ತಿಗಳ ಖಾಸಗಿ ಆಸ್ತಿಯಂತಾಗಿವೆ ಎಂಬ ಭಾವನೆ ಜಾಗೃತವಾಗುತ್ತಿದೆ. ಇದೇ ಪ್ರವೃತ್ತಿಯೇ ಸಮ್ಮೇಳನದ ಸಂದರ್ಭದಲ್ಲೂ ಮುಂದುವರೆದಿದ್ದು ನಮ್ಮ ಕಲಾವಿದರು, ಸಾಹಿತಿಗಳು ನೇಪಥ್ಯಕ್ಕೆ ತಳ್ಳಲ್ಪಟ್ಟು ಸಂಘಟಕರ ಕುಟುಂಬಗಳ ಸದಸ್ಯ ಸಾಂಸ್ಕೃತಿಕರು ಕಾರ್ಯಕ್ರಮಗಳಲ್ಲಿ ರಾರಾಜಿಸಿದ್ದು.
ಕನ್ನಡನಾಡು-ನುಡಿ-ಸಂಸ್ಕೃತಿಗಳ ಬಗ್ಗೆ ನಿಜವಾದ ಕಾಳಜಿಗಳು ಹಾಗೂ ಸ್ವಾಭಿಮಾನಿ ಮನಸ್ಸುಳ್ಳವರು ಅಮೆರಿಕದ ಕನ್ನಡ ಕೂಟಗಳು ಆಯೋಜಿಸುವ ಸಮ್ಮೇಳನಗಳಿಗೆ ಹೋಗಬೇಕೆ ಎಂದು ಗಂಭೀರವಾಗಿ ಆಲೋಚಿಸುವ ಕಾಲ ಸನ್ನಿಹಿತವಾಗಿದೆ.

ಕನ್ನಡಾಭಿಮಾನಶೂನ್ಯವಾದ ಸಂಘಟನೆಗಳ ವೇದಿಕೆಗಳಲ್ಲಿ ನಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುವ ಸ್ಧಿತಿಗೆ ಕನ್ನಡಿಗರನ್ನು ತಳ್ಳುವ ಮಟ್ಟಕ್ಕೆ ಇಂಥ ಸಮ್ಮೇಳನಗಳು ತಲುಪುತ್ತಿರುವಂತಿವೆ. ಕನ್ನಡ ಸಂಸ್ಕೃತಿಯನ್ನು ಪೋಷಿಸಿ - ರಕ್ಷಿಸುವ ಹೆಸರಿನಲ್ಲಿ ಕನ್ನಡ ನಾಡು - ನುಡಿ ಜನತೆಗೆ ಅವಮಾನವಾದರೆ ಅದನ್ನು ನಾವು ಸಹಿಸಲಾರೆವು ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಇವರಿಗೆ ಮುಟ್ಟಿಸಲಿ.

No comments:

Post a Comment